2025ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಿನ್ನಾಳ ಗ್ರಾ.ಪಂ ಅಧ್ಯಕ್ಷೆಗೆ ಪ್ರಧಾನಿ ಮೋದಿ ಆಹ್ವಾನ..!

ಬೆಂಗಳೂರು: ಪ್ರತಿ ವರ್ಷ ಜ.26ರಂದು ದೆಹಲಿಯ ರಾಜಪಥ್ನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆಯುತ್ತದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೊಪ್ಪಳ ತಾಲೂಕು ಕಿನ್ನಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ವೇತಾ ಡಂಬಳ ಹಾಗೂ ಅವರ ಪತಿಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಆಹ್ವಾನ ನೀಡಿದೆ.
ಕಳೆದ ಕೆಲ ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನರೇಗಾದಲ್ಲಿ ಸಾಧನೆ ಮಾಡಿರುವವರು ಸೇರಿ ನಾನಾ ಯೋಜನೆಯಲ್ಲಿ ಗಣನೀಯ ಸಾಧನೆ ಮಾಡಿರುವ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಗುಂಪಿನ ಸಾಧಕರಿಗೆ ಆಹ್ವಾನ ನೀಡುತ್ತಿದ್ದಾರೆ. ಇದರ ಭಾಗವಾಗಿ ಈ ಬಾರಿ ದೇಶಾದ್ಯಂತ 750 ಗ್ರಾ.ಪಂ ಅಧ್ಯಕ್ಷರನ್ನು ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಈ ಪೈಕಿ ರಾಜ್ಯದ 12 ಗ್ರಾ.ಪಂ ಅಧ್ಯಕ್ಷರಿಗೆ ಅವಕಾಶ ದೊರೆತಿದೆ. ಕೇಂದ್ರದ ಆಹ್ವಾನದ ಹಿನ್ನೆಲೆ ರಾಜ್ಯ ಪಂಚಾಯತ್, ರಾಜ್ ಆಯುಕ್ತಾಲಯ ಸಂಬಂಧಿಸಿದ ಜಿಲ್ಲೆಯ ಜಿ.ಪಂ ಸಿಇಒಗಳಿಗೆ ಪತ್ರ ಬರೆದು ದೆಹಲಿಗೆ ಕಳುಹಿಸಲು ಕ್ರಮ ವಹಿಸಬೇಕು. ಸಾರಿಗೆ ಮತ್ತು ವಸತಿ ಸಹಿತ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಿ ದೆಹಲಿಗೆ ಕಳುಹಿಸಬೇಕು ಎಂದು ಸೂಚಿಸಿದೆ.
ಪತ್ರದಲ್ಲಿ ಏನಿದೆ?
ರಾಜ್ಯದ 12 ಗ್ರಾಪಂ ಅಧ್ಯಕ್ಷರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಬಂದಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಪಂ ಅಧ್ಯಕ್ಷೆ ಕೂಡಾ ಒಬ್ಬರು. ರಾಜ್ಯದಿಂದ ಹಾವೇರಿ, ಮೈಸೂರು, ಹಾಸನ, ಮಂಡ್ಯ, ಕೊಡಗು, ಚಿತ್ರದುರ್ಗ, ಗದಗ, ಬೀದರ್ ಮತ್ತು ಉಡುಪಿ ಜಿಲ್ಲೆಗೆ ಸೇರಿರುವ ಒಟ್ಟು 12 ಗ್ರಾಮ ಪಂಚಾಯತ್ ಅಧ್ಯಕ್ಷರು ಆಯ್ಕೆಯಾಗಿದ್ದಾರೆ.
ಗ್ರಾಪಂ ಅಧ್ಯಕ್ಷರ ಜೊತೆ ಅವರ ಪತಿ ಅಥವಾ ಪತ್ನಿಯನ್ನು ಕರೆದೊಯ್ಯಲು ಅವಕಾಶವಿದೆ. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗುವ ಗ್ರಾಪಂ ಅಧ್ಯಕ್ಷರು ಮತ್ತು ಅವರ ಕುಟುಂಬದ ಒಬ್ಬರಿಗೆ ಹೋಗಿ ಬರಲು ಮತ್ತು ತಂಗಲು ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ. ಅಧ್ಯಕ್ಷರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಲು ಅನುಕೂಲ ಆಗಲು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಅವರಿಗೂ ಕೂಡ ಪತಿ ಅಥವಾ ಪತ್ನಿಗೆ ದೆಹಲಿಗೆ ಹೋಗಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






