ಕನ್ನಡಿಗರ ಹೋರಾಟ ಜೋರಾಗ್ತಿದ್ದಂತೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್.!

ನಟ ಕಮಲ್ ಹಾಸನ್ ಅಭಿನಯದ ಸಿನಿಮಾ ಬೆಂಗಳೂರಲ್ಲಿ ಬಿಡುಗಡೆ ಆದ್ರೆ ಬಂದ್ ಫಿಕ್ಸ್ ಎಂದು ಕನ್ನಡ ಪರ ಸಂಘಟನೆಗಳು ಹೇಳುತ್ತಿವೆ. ಆದರೆ ಕನ್ನಡ ಭಾಷೆಗೆ ಅವಮಾನ ಮಾಡಿರುವ ಕಮಲ್ ಹಾಸನ್ ಅವರು ಕ್ಷಮೆ ಕೇಳಲು ಗಡುವು ನೀಡಲಾಗಿದೆ. ನಾಳೆ ಅಂದ್ರೆ ಜೂನ್ 2ರ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಹೋರಾಟ ಕೈ ಬಿಡಲಾಗುತ್ತಿದೆ.
ಇದರ ನಡುವೆ ನಟ ಕಮಲ್ ಹಾಸನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್ ಅವರು ತಮ್ಮ ಸಿನಿಮಾ ಕರ್ನಾಟದಲ್ಲಿ ರಿಲೀಸ್ ಮಾಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ವಿಚಾರದಿಂದ ಸಾಕಷ್ಟು ವಿವಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಉಳಗನಾಯಕನ 300 ಕೋಟಿ ಬಜೆಟ್ನ ಮೂವಿಗೆ ಸ್ವತಃ ನಟನೂ ಬಂಡವಾಳ ಹಾಕಿದ್ದಾರೆ. ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ಭಾರಿ ವಿರೋಧ ಹಿನ್ನಲೆಯಲ್ಲಿ ನಟ, ನಿರ್ಮಾಪಕನಾಗಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜೂನ್ 5ಕ್ಕೆ ಬಿಡುಗಡೆ ಆಗಲಿರುವ ಥಗ್ ಲೈಫ್ ಸಿನಿಮಾ ಹಾಡು, ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಕರ್ನಾಟಕದಲ್ಲಿ ಸಿನಿಮಾಗೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲಿ ಚಿತ್ರ ಪ್ರದರ್ಶನ ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಿಸಬೇಕೆಂದು ಕಮಲ್ ಹಾಸನ್ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.
ರಾಜ್ ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆಯ ಸಿಇಒ ಮೂಲಕ ಕಮಲ್ ಹಾಸನ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸದ್ಯ ಅರ್ಜಿ ಸಲ್ಲಿಕೆಯಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






