ಔತಣಕೂಟ ಮಾಡುವುದು, ಅಲ್ಲಿಂದ ಬೆನ್ನಿಗೆ ಚಾಕು ಹಾಕುವುದು ಅಲ್ಲ: BSY, ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಬೆಳಗಾವಿ: ಔತಣಕೂಟ ಮಾಡುವುದು, ಅಲ್ಲಿಂದ ಬೆನ್ನಿಗೆ ಚಾಕು ಹಾಕುವುದು ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು 35-40 ವರ್ಷಗಳಿಂದ ಬಿಎಸ್ವೈ ಜೊತೆಗೇ ಜೀವನ ಮಾಡಿದ್ದಲ್ಲವೇ? ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ನಾವೇ ಪೆಟ್ರೋಲ್ ಹಾಕಿ ಬಸ್ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟೆವು. ಈಗ ಅವರ ಶಿಷ್ಯಂದಿರು ನಮಗೆ, ‘ಸೈಕಲ್ ಹೊಡೆದಿದ್ದು’ ಎಂದು ಹೇಳುತ್ತಾರೆ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತೀಯರ ಸಭೆ ಆಗುತ್ತದೆ. ಔತಣಕೂಟ ಮಾಡುವುದು, ಅಲ್ಲಿಂದ ಬೆನ್ನಿಗೆ ಚಾಕು ಹಾಕುವುದು ಅಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಉಚ್ಚಾಟನೆ ಮಾಡಿ ಎಂದ ಮಾಹಿತಿ ನಮಗೆ ದೊರೆತಿದೆ. ಯಡಿಯೂರಪ್ಪ ಸೇರಿ ಕೆಲವು ಶಾಸಕರು ಮಾತನಾಡಿದ್ದು ಗೊತ್ತಾಗಿದೆ. ಇದರ ಹಿಂದೆ ಯಡಿಯೂರಪ್ಪ ಕುತಂತ್ರ ಯಾವಾಗಲೂ ಇದ್ದೇ ಇರುತ್ತದೆ. ಯತ್ನಾಳ್ ವಿಪಕ್ಷ ನಾಯಕ, ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗಲಿ ಎಂದು ಈ ಹಿಂದೆಯೂ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದರು. ಆದರೆ, ಅದಾದ ಎರಡೇ ದಿನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಆಯಿತು. ಸಭೆ ಮಾಡಿದ್ದಕ್ಕೆ ನನ್ನ ವಿರೋಧ ಇದೆ ಎಂದು ವಿಜಯೇಂದ್ರ ಹೇಳುತ್ತಾರೆ. ಇವರದ್ದು ನಾಟಕದ ಕಂಪನಿ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






