ಗುರುವಾರ ವಿಷ್ಣು ಪೂಜೆ ಮಾಡುವುದರಿಂದ ಸಿಗುವ ಫಲಗಳೇನು ಗೊತ್ತಾ..?

ಮಹಾವಿಷ್ಣು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬ. ತ್ರಿಮೂರ್ತಿಗಳಲ್ಲಿ ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತನಾದರೆ, ಶಿವ ವಿನಾಶಕ, ವಿಷ್ಣು ಇಲ್ಲಿ ಬ್ರಹ್ಮಾಂಡದ ರಕ್ಷಕ. ಒಳ್ಳೆಯದು ಮತ್ತು ಕೆಟ್ಟದ್ದರ ಸಮತೋಲನವನ್ನು ಪುನಃ ಸ್ಥಾಪಿಸುವುದು ಇವರ ಪಾತ್ರ. ಹಿಂದೂ ಧರ್ಮದಲ್ಲಿ ವಿಷ್ಣುವಿನ ಅವತಾರದ ಕುರಿತಾಗಿ ಯುಗದ ಅಂತ್ಯದಲ್ಲಿ ಮತ್ತೊಮ್ಮೆ ಪುನರ್ಜನ್ಮ ಪಡೆಯುವವನು ವಿಷ್ಣು ಎಂದು ನಂಬುತ್ತಾರೆ. ವಿಷ್ಣುವಿನ ಆರಾಧನೆ ಮಾಡುವ ಭಕ್ತರ ಸಂಖ್ಯೆ ಹೆಚ್ಚಿದೆ. ಪ್ರತಿದಿನ ಈಗಲೂ ಅನೇಕ ಮಹಿಳೆಯರು ದೇವರ ಮುಂದೆ ಕುಳಿತು ಇದನ್ನ ಪಠಿಸುತ್ತಾರೆ. ಸಾಮಾನ್ಯವಾಗಿ ಮಂತ್ರ ಜಪಿಸುವುದರಿಂದ ಮನಸ್ಸು ಮತ್ತು ಮೆದುಳಿಗೆ ಶಕ್ತಿಯ ಸಂವಹನವಾಗುತ್ತದೆ.
ಸಾಮಾನ್ಯವಾಗಿ ಗುರುವಾರ ಗುರು ರಾಘವೇಂದ್ರನನ್ನು ಪೂಜಿಸಬೇಕೆಂದು ಹೇಳುತ್ತಾರೆ. ಆದರೆ ಗುರುವಾರ ಕೇವಲ ರಾಯರನ್ನು ಮಾತ್ರವಲ್ಲ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರವು ಭಗವಾನ್ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಈ ದಿನ ಅವಿವಾಹಿತ ಕನ್ಯೆಯರು ಭಗವಾನ್ ವಿಷ್ಣುವನ್ನು ಪೂಜಿಸಿದರೆ ಅರ್ಹ ವರನನ್ನು ತಮ್ಮ ಪತಿಯಾಗಿ ಪಡೆದುಕೊಳ್ಳುತ್ತಾರೆ. ಮನೆಯಲ್ಲಿನ ಹಣದ ಕೊರತೆ ದೂರವಾಗುತ್ತೆ. ಮಕ್ಕಳಿಲ್ಲದ ದಂಪತಿಗಳು ಸಂತಾನ ಭಾಗ್ಯವನ್ನು ಪಡೆಯುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉನ್ನತ ದರ್ಜೆಯ ಕೆಲಸ ಸಿಗುತ್ತದೆ. ಆದರೆ ಈ ದಿನ ಮಾಡುವ ಉಪವಾಸವನ್ನು ಯಾವುದೇ ತಪ್ಪುಗಳಿಲ್ಲದೆ ಮಾಡಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.
ಗುರುವಾರ ವಿಷ್ಣು ಪೂಜೆ ಮಾಡುವುದು ಹೇಗೆ? ಗುರುವಾರ, ಬೆಳಿಗ್ಗೆ ಸ್ನಾನ ಮಾಡಿ ವಿಷ್ಣುನನ್ನು ಪೂಜಿಸಬೇಕು. ಪೂಜೆಯಲ್ಲಿ ಹಳದಿ ವಸ್ತುಗಳು, ಹಳದಿ ಹೂವುಗಳು, ಹಳದಿ ಬಣ್ಣದ ಬೇಳೆಯನ್ನು, ಒಣ ದ್ರಾಕ್ಷಿ, ಸಿಹಿ ತಿಂಡಿಗಳನ್ನು, ಹಳದಿ ಅಕ್ಕಿ ಮತ್ತು ಅರಿಶಿನವನ್ನು ಅರ್ಪಿಸಬೇಕು. ವಿಷ್ಣುವಿನ ಕಥೆಯನ್ನು ಓದುವ ಮತ್ತು ಪೂಜಿಸುವ ಸಮಯದಲ್ಲಿ, ಶುದ್ಧ ಮನಸ್ಸಿನಿಂದ ತಮ್ಮೆಲ್ಲಾ ಆಸೆಗಳನ್ನು ಈಡೇರಿಸುವಂತೆ ಪೂಜಿಸಬೇಕು.
ಬಾಳೆ ಮರವನ್ನು ಗುರುವಾರ ಪೂಜಿಸುವುದು ಅವಶ್ಯಕ. ನೀರಿಗೆ ಅರಿಶಿನ ಸೇರಿಸಿ ಮತ್ತು ಬಾಳೆ ಮರಕ್ಕೆ ಅರ್ಪಿಸಿ. ನಂತರ ಬಾಳೆ ಮರಕ್ಕೆ ಬಾಳೆಹಣ್ಣು, ಕಡಲೆ ಬೇಳೆ, ಬೆಲ್ಲ ಮತ್ತು ಒಣ ದ್ರಾಕ್ಷಿಯನ್ನು ಅರ್ಪಿಸಿ. ಆರತಿಯನ್ನು ಬೆಳಗಿ ಬಾಳೆ ಗಿಡದ ಕೆಳಗೆ ದೀಪವನ್ನು ಬೆಳಗಿಸಬೇಕು. ಗುರುವಾರ, ಉಪವಾಸವನ್ನು ಮಾಡುವಾಗ ಕೇವಲ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸಬೇಕು.
ನಿಮ್ಮ ಪ್ರತಿಕ್ರಿಯೆ ಏನು?






