ಚಾಂಪಿಯನ್ಸ್ ಟ್ರೋಫಿ: ಟೀಮ್ ಇಂಡಿಯಾಗೆ ಅನುಕೂಲ ಮಾಡಿಕೊಟ್ಟಿತಾ ICC: ಪಾಕ್ ಕ್ರಿಕೆಟಿಗರ ಆರೋಪವೇನು?

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾಗೆ ಅನುಕೂಲ ಇರುವ ಎಲ್ಲಾ ವಾತಾವರಣ ಸೃಷ್ಟಿ ಆಗಿದೆ ಎಂದು ಪಾಕ್ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಶುರುವಾಗಲು ಇನ್ನು ತಿಂಗಳು ಮಾತ್ರ ಉಳಿದಿವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ಜರುಗಿದರೆ, ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಳ್ಳಲಿದೆ. ಇತ್ತ ಭಾರತ ತಂಡದ ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯುತ್ತಿರುವುದರ ಬಗ್ಗೆ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳಿದ್ದು, ಇಲ್ಲಿ ಟೀಮ್ ಇಂಡಿಯಾ ಮಾತ್ರ ಒಂದೇ ಮೈದಾನದಲ್ಲಿ ತನ್ನ ಪಂದ್ಯಗಳನ್ನಾಡಲಿದೆ. ಇದೇ ವೇಳೆ ಇತರೆ ತಂಡಗಳು ಪಾಕಿಸ್ತಾನದ ಮೂರು ಮೈದಾನದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಹೈಬ್ರಿಡ್ ಮಾದರಿಯು ಟೀಮ್ ಇಂಡಿಯಾ ಪಾಲಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಅಲ್ತಾಫ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡವು ಲೀಗ್ ಹಂತದಲ್ಲಿ ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ. ಇದಕ್ಕಾಗಿ ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳು ದುಬೈಗೆ ಹೋಗಬೇಕಾಗುತ್ತದೆ. ಆದರೆ ಟೀಮ್ ಇಂಡಿಯಾಗೆ ಯಾವುದೇ ಪ್ರಯಾಣದ ಚಿಂತೆಯಿಲ್ಲ.
ಇಲ್ಲಿ ಉಳಿದ ಮೂರು ತಂಡಗಳು ದುಬೈಗೆ ಹೋಗಿ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಬೇಕು. ಆದರೆ ಭಾರತ ತಂಡವು ಎಲ್ಲಾ ಪಂದ್ಯಗಳನ್ನು ಅಲ್ಲೇ ಆಡುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅದರಲ್ಲೂ ಪ್ರಯಾಣದ ಆಯಾಸವು ಟೀಮ್ ಇಂಡಿಯಾವನ್ನು ಕಾಡುವುದಿಲ್ಲ. ಇದುವೇ ಭಾರತ ತಂಡಕ್ಕೆ ಪಾಲಿಗೆ ದೊಡ್ಡ ಅನುಕೂಲ ಎಂದು ಸಲೀಂ ಅಲ್ತಾಫ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಪಾಕಿಸ್ತಾನ್ ತಂಡದ ಮಾಜಿ ನಾಯಕ ನಾಯಕ ಇಂತಿಖಾಬ್ ಆಲಂ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನು ಎಲ್ಲಿ ಆಡಬೇಕೆಂದು ತಿಳಿದಿರುವ ಏಕೈಕ ತಂಡ ಭಾರತ. ಅದೇ ಉಳಿದ ತಂಡಗಳ ಸೆಮಿಫೈನಲ್ ನಿರ್ಧಾರವಾಗುವುದು ಗ್ರೂಪ್ ಹಂತದ ಪಂದ್ಯಗಳ ಬಳಿಕ. ಇದರಿಂದ ಟೀಮ್ ಇಂಡಿಯಾ ಒಂದೇ ಪಿಚ್ನಲ್ಲಿ ಹೊಂದಿಕೊಳ್ಳಲು ಕೂಡ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






