ಡಾ.ರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಅರೆಸ್ಟ್
ಬೆಂಗಳೂರು: ಡಾ. ರಾಜ್ಕುಮಾರ್ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿನೋದ್ ಶೆಟ್ಟಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ವಿಷ್ಣುವರ್ಧನ್ ಅವರ ಸ್ಮಾರಕ ತೆರವು ವಿಚಾರದಲ್ಲಿ ರಾಜ್ಯದಾದ್ಯಂತ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಿನೋದ್ ಶೆಟ್ಟಿ ಮೊದಲು ಒಂದು ವಿಡಿಯೋ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಆ ವಿಡಿಯೋಗೆ ಅಣ್ಣಾವ್ರ ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ನೀಡಿದ್ದರಿಂದ, ಕೋಪಗೊಂಡ ಶೆಟ್ಟಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ರಾಜ್ಕುಮಾರ್ ಕುಟುಂಬದವರ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿಂದಿಸಿದ್ದರು.
ಅಷ್ಟೇ ಅಲ್ಲದೆ, ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಹೇಳಿ ತನ್ನ ಮೊಬೈಲ್ ನಂಬರನ್ನೂ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಣ್ಣಾವ್ರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ನಂತರ ಶೆಟ್ಟಿ ಕ್ಷಮೆಯಾಚಿಸಿ, “ರಾಜ್ಕುಮಾರ್ ಅವರ ಬಗ್ಗೆ ನಾನು ಹಾಗೆ ಮಾತನಾಡಬಾರದಿತ್ತು. ಕರ್ನಾಟಕದ ಜನರಲ್ಲಿ ಕ್ಷಮೆ ಕೇಳುತ್ತೇನೆ. ವಿಷ್ಣು ಅಪ್ಪಾಜಿ ಬಗ್ಗೆ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡಿದ ದ್ವೇಷದಿಂದ ನಾನು ಈ ರೀತಿ ಮಾತನಾಡಿದೆ” ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?