ದೇಶದ ಅನೇಕ ರಾಜ್ಯಗಳಿಗೆ ಬೇಕಾಗಿದ್ದ ಸೈಬರ್ ಕ್ರಿಮಿನಲ್ʼಗಳು ಬೆಂಗಳೂರಿನಲ್ಲಿ ಅರೆಸ್ಟ್!

ಬೆಂಗಳೂರು:- ವಿವಿಧ ರಾಜ್ಯಗಳ ಪೊಲೀಸರಿಗೆ 122 ಪ್ರಕರಣಗಳಲ್ಲಿ ಬೇಕಾಗಿದ್ದ ಸೈಬರ್ ಕ್ರಿಮಿನಲ್ಗಳು ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳನ್ನು ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಾಹೀನ್, ಮೊಹಮ್ಮದ್ ಮುಝಮ್ಮಿಲ್, ತೇಜಸ್, ಚೇತನ್, ವಾಸಿಂ, ಸೈಯದ್ ಜೈದ್, ಸಾಹಿ ಅಬ್ದುಲ್ ಅನನ್ ಮತ್ತು ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ.
ಬೆಂಗಳೂರು ಉತ್ತರ ಸೈಬರ್ ಕ್ರೈಂ ಪೊಲೀಸರಿಂದ ಈ 10 ಮಂದಿ ಸೈಬರ್ ವಂಚಕರು ಅರೆಸ್ಟ್ ಆಗಿದ್ದಾರೆ. ಈ ವಂಚನೆ ಜಾಲದ ಕಿಂಗ್ಪಿನ್ಗಳು ಚೀನಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. 10 ಆರೋಪಿಗಳ ಪೈಕಿ ಮೂವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಕ್ ಔಟ್ ಸುತ್ತೋಲೆ ಮೂಲಕ ಬಂಧಿಸಲಾಗಿದೆ. ಆರೋಪಿಗಳು ಪೀಣ್ಯದ ನೆಲಗದರನಹಳ್ಳಿಯಲ್ಲಿರುವ ಕಚೇರಿ ಜಾಗದಲ್ಲಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು.
ಮಹಿಳೆಯೊಬ್ಬರು ಸುಮಾರು 25 ಲಕ್ಷ ರೂಪಾಯಿ ಕಳೆದುಕೊಂಡ ನಂತರ, ಜುಲೈ 3 ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ 72 ಮೊಬೈಲ್ ಫೋನ್ಗಳು, 182 ಡೆಬಿಟ್ ಕಾರ್ಡ್ಗಳು, ವಿವಿಧ ಟೆಲಿಕಾಂ ಆಪರೇಟರ್ಗಳ 133 ಸಿಮ್ ಕಾರ್ಡ್ಗಳು, 127 ಬ್ಯಾಂಕ್ ಪಾಸ್ಬುಕ್ಗಳು ಮತ್ತು 1.74 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಂತ್ರಸ್ತರಿಗೆ ವಂಚಿಸಲು ಬಳಸಿದ ಖಾತೆಗಳಲ್ಲಿದ್ದ 7.34 ಲಕ್ಷ ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






