ಪಾಕ್ ದಾಳಿಗೆ ಗೋರಂಟ್ಲು ಯೋಧ ಹುತಾತ್ಮ: ಯಾರು ಈ ಮುರುಳಿ ನಾಯಕ್..? ಇಲ್ಲಿದೆ ಮಾಹಿತಿ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಉಗ್ರರ ಮೇಲೆ ಆಪರೇಷನ್ ಸಿಂಧೂರ್ ನಡೆಸಿತು. ಇದರಿಂದ ಕೆರಳಿದ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ದಾಳಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರ ಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಏಕೈಕ ಪುತ್ರ ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮುರಳಿ ನಾಯಕ್ ಸೇನೆಗೆ ಸೇರಲು ಕನಸು ಕಂಡಿದ್ದರು. ಅವರಿಗೆ ಸೇನೆಯ ಸಮವಸ್ತ್ರ ಎಂದರೆ ತುಂಬಾ ಇಷ್ಟ. ಅವರ ತಂದೆ ಹೇಳುವಂತೆ, ʻನನ್ನ ಮಗ ಯಾವಾಗಲೂ ಸೇನೆಗೆ ಸೇರಲು ಬಯಸುತ್ತಿದ್ದನು. ಸಮವಸ್ತ್ರವನ್ನು ತುಂಬಾ ಪ್ರೀತಿಸುತ್ತಿದ್ದನು. ಸ್ನೇಹಜೀವಿ ಮತ್ತು ಸರಳ ವ್ಯಕ್ತಿ. ಸೈನಿಕನಾಗಿ ದೇಶ ಸೇವೆ ಮಾಡಲು ಹೆಮ್ಮೆ ಪಡುತ್ತಿದ್ದನುʼ ಎಂದು ಹೇಳಿದ್ದಾರೆ.
2022ರ ಡಿಸೆಂಬರ್ನಲ್ಲಿ ಮುರಳಿ ನಾಯಕ್ ಅವರ ಕನಸು ನನಸಾಯಿತು. ಅವರು ಸೇನೆಗೆ ಸೇರಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 851 ಲೈಟ್ ರೆಜಿಮೆಂಟ್ನಲ್ಲಿ ಅವರನ್ನು ನೇಮಿಸಲಾಯಿತು. ಮೇ 6 ರಂದು ಮುರಳಿ ನಾಯಕ್ ತಮ್ಮ ಕುಟುಂಬಕ್ಕೆ ಕರೆ ಮಾಡಿ ಗಡಿಯಿಂದ ಗುಂಡಿನ ದಾಳಿ ನಡೆಯುತ್ತಿರುವ ಬಗ್ಗೆ ತಿಳಿಸಿದ್ದರು.
ಆಗ ಇನ್ನೂ ಹೆಚ್ಚು ಗುಂಡಿನ ದಾಳಿ ನಡೆಯುತ್ತಿದೆ ಎಂದು ಹೇಳಿದನು. ಅವನಿಗೆ ಹೆತ್ತವರ ಬಗ್ಗೆ ಚಿಂತೆ ಇತ್ತು. ನಾನು ಅವನಿಗೆ ಧೈರ್ಯ ಹೇಳಿದೆ. ನೀನು ಜಾಗರೂಕನಾಗಿರು, ನಾವು ನಿನ್ನ ಹೆತ್ತವರನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದೆ. ಅವನು ಈ ಹಿಂದೆಂದೂ ಇಷ್ಟು ಚಿಂತಿತನಾಗಿರಲಿಲ್ಲ. ಗಡಿಯಿಂದ ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಿರುವ ಬಗ್ಗೆ ಹೇಳುತ್ತಿದ್ದನು"ಎಂದು ಅವರ ಸೋದರ ಸಂಬಂಧಿ ರಂಜಿತ್ ಸ್ಮರಿಸಿಕೊಂಡರು.
ರಾಷ್ಟ್ರ ಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರ ಯೋಧ ಶ್ರೀ ಮುರಳಿ ನಾಯಕ್ ಅವರ ಅದಮ್ಯ ಧೈರ್ಯಕ್ಕೆ ನಮನಗಳು. ಅವರ ಶೌರ್ಯ ನಮ್ಮ ಸಶಸ್ತ್ರ ಪಡೆಗಳ ಅತ್ಯುನ್ನತ ಆದರ್ಶಗಳನ್ನು ಸಾಕಾರಗೊಳಿಸುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ನೀಡುತ್ತದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಈ ದುಃಖದ ಸಮಯದಲ್ಲಿ ದೇಶವು ನಿಮ್ಮೊಂದಿಗೆ ನಿಂತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






