ಮಾವನ ಮಗಳನ್ನು ಕೊಲೆ ಮಾಡಿ ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿ; ಸತ್ಯ ಹೊರಬರುತ್ತಿದ್ದಂತೆ ಸೂಸೈಡ್
ಹಾಸನ:- ಜಿಲ್ಲೆ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳನ್ನೇ ಕೊಂದು ಹೃದಯಾಘಾತ ಎಂದು ಬಿಂಬಿಸಿ, ಸತ್ಯ ಹೊರಬರುತ್ತಿದ್ದಂತೆ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
48 ವರ್ಷದ ಶಕುಂತಲ ಕೊಲೆಯಾದ ಮಹಿಳೆ. 55 ವರ್ಷದ ಶಿವಮೂರ್ತಿ ಮಾವನ ಮಗಳನ್ನೇ ಕೊಂದ ಆರೋಪಿ. ತನಿಖೆ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷಗಳ ಹಿಂದೆ ಪಾಲಾಕ್ಷ ಜೊತೆ ವಿವಾಹವಾಗಿದ್ದ ಶಕುಂತಲಾ, ಮಕ್ಕಳಿಲ್ಲದ ಕಾರಣ ಮನೆಯಲ್ಲಿ ಇಬ್ಬರೇ ವಾಸವಿದ್ದರು. ಆ.20 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನ ಮಗಳ ಮನೆಗೆ ಶಿವಮೂರ್ತಿ ಬಂದಿದ್ದ. ಮನೆಗೆ ಬರುವಾಗಲೇ ನಕಲಿ ಚಿನ್ನದ ಸರ ತಂದಿದ್ದ. ಬಳಿಕ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ನಕಲಿ ಚಿನ್ನದ ಸರ ಹಾಕಿದ್ದ. ದನ ಮೇಯಿಸಲು ಹೋಗಿದ್ದ ಶಕುಂತಲಾ ಪತಿ ಪಾಲಾಕ್ಷ ವಾಪಸ್ ಮನೆಗೆ ಬಂದ ವೇಳೆ ಶಕುಂತಲಾ ನೆಲದ ಮೇಲೆ ಬಿದ್ದಿದ್ದಳು.
ಪತ್ನಿ ನೆಲದ ಮೇಲೆ ಬಿದ್ದಿರುವ ಬಗ್ಗೆ ಪಾಲಾಕ್ಷ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಶಕುಂತಲಾ ಸಾವನ್ನಪ್ಪಿರುವ ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಶಕುಂತಲಾ ಸಹೋದರಿಯರು ಪತಿ ಪಾಲಾಕ್ಷ ವಿರುದ್ಧವೇ ಆರೋಪ ಮಾಡಿದ್ದರು. ಇದೇ ವೇಳೆ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ ಶಿವಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ವೇಳೆ ಗ್ರಾಮಸ್ಥರು ಶಿವಮೂರ್ತಿ ಮಾತನ್ನೇ ನಂಬಿದ್ದರು. ಆದರೆ ಸಾವಿನ ಬಗ್ಗೆ ಅನುಮಾನಗೊಂಡ ಶಕುಂತಲಾ ಸಂಬಂಧಿಕ 112ಕ್ಕೆ ಕರೆ ಮಾಡಿದ ಹಿನ್ನೆಲೆ ಸ್ಥಳಕ್ಕೆ ಜಾವಗಲ್ ಪೊಲೀಸರು ಆಗಮಿಸಿದ್ದರು. ಈ ವೇಳೆ ಹೃದಯಾಘಾತವಾಗಿದೆ ಮರಣೋತ್ತರ ಪರೀಕ್ಷೆ ಬೇಡ ಎಂದು ಶಿವಮೂರ್ತಿ ಹೇಳಿದ್ದಾನೆ. ಅಲ್ಲದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಗ್ರಾಮದ ಕೆಲವರು ಫೋನ್ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಂತೆ ಶಿವಮೂರ್ತಿ ಭಯಗೊಂಡಿದ್ದ. ಗ್ರಾಮದ ಹಲವೆಡೆ ಸಿಸಿಟಿವಿ ಅಳವಡಿಸಿದ್ದು, ಶಿವಮೂರ್ತಿ ಸಿಸಿಟಿವಿ ಇದ್ದ ಕಡೆ ಓಡಾಡುವುದನ್ನೇ ಬಿಟ್ಟಿದ್ದ. ಶಿವಮೂರ್ತಿ ಪತ್ನಿ ಗ್ರಾ.ಪಂ. ಸದಸ್ಯೆ ಆಗಿದ್ದರು. ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಹೆದರಿದ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿಮ್ಮ ಪ್ರತಿಕ್ರಿಯೆ ಏನು?