ಸಿದ್ದರಾಮಯ್ಯರ ಸಂಕಷ್ಟಕ್ಕೆ ನಿಂತ ಹೈಕಮಾಂಡ್.. ದೆಹಲಿ ಸಭೆಯಲ್ಲಿ ನಡೆದ ಪಿನ್ ಟು ಪಿನ್ ಮಾಹಿತಿ..!

ಸಿದ್ದರಾಮಯ್ಯರ ಸಂಕಷ್ಟಕ್ಕೆ ನಿಂತ ಹೈಕಮಾಂಡ್.. ದೆಹಲಿ ಸಭೆಯಲ್ಲಿ ನಡೆದ ಪಿನ್ ಟು ಪಿನ್ ಮಾಹಿತಿ..!
ರಾಜ್ಯ ರಾಜಕಾರಣದಲ್ಲಿ ಮಾತಿನ ಮಹಾಯುದ್ಧವೇ ನಡೀತಿದೆ. ಜೈಲಿನ ಭೀತಿಯಿಂದ ಜಸ್ಟ್ ಮಿಸ್ ಆಗಿ ಬಂದ ಸಿದ್ದರಾಮಯ್ಯ, ಅಕ್ಷರಶಃ ಸಮರ ಸಾರಿದ್ದಾರೆ. ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಹೈಕಮಾಂಡ್ ನಾಯಕರ ಬಲವನ್ನ ಕೇಳಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರನ್ನ ಭೇಟಿ ಮಾಡಿ ಪ್ರಾಸಿಕ್ಯೂಷನ್ ವಿರುದ್ಧ ಹೋರಾಟಕ್ಕೆ ಬೆಂಬಲ ಪಡೆದಿದ್ದಾರೆ.
ಸಂಪುಟ ಮೀಟಿಂಗ್, CLP ಸಭೆ ನಿರ್ಣಯ ಕೈಗೆತ್ಕೊಂಡು, ಮೈತ್ರಿಯನ್ನ ಮರ್ಮಾಘಾತಕ್ಕೆ ತಳ್ಳುವ ಮಹಾತಂತ್ರಗಳ ಯಾಗಕ್ಕೆ ಸಿದ್ದರಾಮಯ್ಯ, ಡಿಕೆಶಿ ದೆಹಲಿ ಯಾತ್ರೆ ಮಾಡಿದ್ರು. ದೆಹಲಿ ನಾಯಕರನ್ನ ಭೇಟಿ ಮಾಡಿ ರಾಜ್ಯಪಾಲರು ಮತ್ತು ದೋಸ್ತಿ ವಿರುದ್ಧ ಯುದ್ಧ ಮಾಡಲು ಮುಂದಾಗಿದ್ರು. ಇದೀಗ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ತಮ್ಮ ಬಲವನ್ನ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಸಿಎಂ ಆಗಿಯೇ ರಾಜಕೀಯ ಹೋರಾಟಕ್ಕೆ ದೆಹಲಿ ನಾಯಕರ ಬೆಂಬಲವನ್ನ ಯಾಚಿಸಿ ಸಫಲರಾಗಿದ್ದಾರೆ.
ಪ್ರಾಸಿಕ್ಯೂಷನ್ ಬಗ್ಗೆ ಸಿದ್ದರಾಮಯ್ಯರಿಂದ ಹೈಕಮಾಂಡ್ ನಾಯಕರು ಸಂಪೂರ್ಣ ಮಾಹಿತಿ ಪಡೆದು ಕೊಂಡಿದ್ದಾರೆ. ಕಾನೂನಿನ ಮುಖಾಂತರ ಸಿದ್ದರಾಮಯ್ಯರನ್ನ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೈ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲ, ಕಾನೂನಾತ್ಮಕವಾಗಿ ಸಿಲುಕುವುದಿಲ್ಲ ಅಂತ ತಿಳಿಸಿದ್ದಾರೆ. ಅಹಿಂದ ಲೀಡರ್ನನ್ನ ಬಿಜೆಪಿ ಟಾರ್ಗೆಟ್ ಮಾಡುತ್ತಿದ್ದು, ನನ್ನ ವಿರುದ್ಧ ಷಡ್ಯಂತ್ರದ ಮಾಡುತ್ತಿದೆ. ಗ್ಯಾರಂಟಿಗಳು ಜನರಿಗೆ ತಲುಪುತ್ತಿರುವುದನ್ನ ವಿಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಅಂತ ಹೈ ಕಮಾಂಡ್ ನಾಯಕರ ಮುಂದೆ ಸಿದ್ದರಾಮಯ್ಯ ಅವಲತ್ತುಕೊಂಡಿದ್ದಾರೆ.
ದೆಹಲಿ ನಾಯಕರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭ ಬರಲ್ಲ ಅಂತಲೂ ಚರ್ಚೆ ನಡೆಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಸಭೆಯಲ್ಲಿ ಸಿದ್ದರಾಮಯ್ಯ ಪರವಾಗಿಯೇ ಮಾತನಾಡಿದ್ದಾರೆ. ಪ್ರಮುಖವಾಗಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡದ ಬಗ್ಗೆಯೂ ಹೈಕಮಾಂಡ್ಗೆ ರಾಜ್ಯ ನಾಯಕರು ಮಾಹಿತಿ ನೀಡಿದ್ದಾರೆ. ರಾಜ್ಯಪಾಲರು ಮತ್ತು ವಿಪಕ್ಷಗಳ ವಿರುದ್ಧ ರಾಜ್ಯ ಹಾಗೂ ರಾಷ್ಟ್ರರಾಜಧಾನಿಯಲ್ಲಿ ಪ್ರಬಲ ಹೋರಾಟ ನಡೆಸೋ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬ್ಯುರೊ ರಿಪೋರ್ಟ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






