Aishwarya Gowda Case: ಐಶ್ವರ್ಯಾಗೌಡ ಪ್ರಕರಣ: ವಿಚಾರಣೆಗೆ ಬರುವಂತೆ ಡಿ.ಕೆ.ಸುರೇಶ್ಗೆ ED ನೋಟಿಸ್

ಬೆಂಗಳೂರು: ಚಿನ್ನಾಭರಣವನ್ನು ವಂಚಿಸಿದ ಆರೋಪ ಹೊತ್ತ ಐಶ್ವರ್ಯಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಆರೋಪ ಐಶ್ವರ್ಯ ಗೌಡ ವಿರುದ್ಧ ಇದೆ.
ಇದೇ ಸಂದರ್ಭದಲ್ಲಿ ಐಶ್ವರ್ಯ ಗೌಡ ಅವರು ಡಿಕೆ ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡಿದ್ದರು. ಆದರೆ ಇದನ್ನು ಡಿಕೆ ಸುರೇಶ್ ನಿರಾಕರಿಸಿದ್ದರು. ಆದರೆ ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಡಿಕೆ ಸುರೇಶ್ ಗೆ ನೋಟಿಸ್ ಕೊಟ್ಟಿದ್ದಾರೆ ಹಾಗೂ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್, ಮಧ್ಯಾಹ್ನ ನಾನು ಹೊರಗೆ ಹೋಗಿದ್ದೆ. ಈ ವೇಳೆ ಇಡಿ ಅಧಿಕಾರಿಗಳು ಬಂದಿದ್ದಾರೆ. ಬಳಿಕ ನಾನು ಅವರನ್ನು ಮನೆಯಲ್ಲಿ ಭೇಟಿ ಮಾಡಿದಾಗ, ಇಡಿ ಸಮನ್ಸ್ ಅಂದ್ರು, ಯಾವ ವಿಚಾರವಾಗಿ ಅಂತ ನೋಡಿದ್ರೆ ಐಶ್ವರ್ಯ ಗೌಡ ಕೇಸ್ ಎಂದು ಗೊತ್ತಾಯ್ತು ಎಂದರು.
ಜೂನ್ 19 ಕ್ಕೆ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ. ಆದರೆ, ಅವತ್ತು ಪೂರ್ವನಿಶ್ಚಿತ ಕಾರ್ಯಕ್ರಮ ಇದೆ. ಹಾಗಾಗಿ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದೇನೆ. ಅದಕ್ಕೆ ಲಿಖಿತ ರೂಪದಲ್ಲಿ ಕೊಡಲು ಹೇಳಿದ್ದಾರೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






