ಕನ್ನಡ ಮಾತಾಡೊಲ್ಲವೆಂದು ಹಿಂದಿ ದರ್ಪ ತೋರಿದ್ದ SBI ಬ್ಯಾಂಕ್ ಮ್ಯಾನೇಜರ್ ಟ್ರಾನ್ಸ್ಫರ್!

ಬೆಂಗಳೂರು: ಎಂದಿಗೂ ಕನ್ನಡ ಮಾತನಾಡುವುದಿಲ್ಲ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಹೇಳಿರುವ ವಿಡಿಯೋ ಒಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕನ್ನಡ ಭಾಷೆಗೆ ಬ್ಯಾಂಕ್ ಮ್ಯಾನೇಜರ್ ಅಪಮಾನ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರರು ಚಂದಾಪುರ SBI ಬ್ಯಾಂಕ್ ಶಾಖೆಗೆ ನುಗ್ಗಿ ಪ್ರತಿಭಟನೆ ಮಾಡಿದ್ದರು.
ಅದಲ್ಲದೆ ಬ್ಯಾಂಕ್ ಮ್ಯಾನೇಜರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಮ್ಯಾನೇಜರ್ ವರ್ಗಾವಣೆ ಮಾಡಿದ್ದಾರೆ. ಕನ್ನಡಿಗರ ಹೋರಾಟಕ್ಕೆ ಹೆದರಿ ರಾತ್ರೋರಾತ್ರಿ ಟ್ರಾನ್ಸ್ಪರ್ ಮಾಡಲಾಗಿದೆ. ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ಎಂದು ನಿನ್ನೆ ರಾತ್ರಿಯೇ ಆದೇಶ ನೀಡಲಾಗಿತ್ತು. ಹೀಗಾಗಿ ಆ ಬ್ಯಾಂಕ್ ಮ್ಯಾನೇಜರ್ ಅನ್ನು ಟ್ರಾನ್ಸ್ಪರ್ ಮಾಡಲಾಗಿತ್ತು.
ಆನೇಕಲ್ ತಾಲೂಕಿನ ಚಂದಾಪುರದ ಸೂರ್ಯನಗರದಲ್ಲಿನ ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಚಳವಳಿಗಾರರೊಬ್ಬರಿಗೆ ಕನ್ನಡ ಮಾತನಾಡುವುದೇ ಇಲ್ಲ ಎಂದು ಪಟ್ಟು ಹಿಡಿದ ವಿಡಿಯೋ ವೈರಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಎಂದಿನಂತೆ ಕನ್ನಡ ಮಾತನಾಡದ ಮಹಿಳಾ ಮ್ಯಾನೇಜರ್ ಕೇವಲ ಇಂಗ್ಲಿಷ್ , ಹಿಂದಿಯಲ್ಲಿಯೇ ಪ್ರತಿಕ್ರಿಯಿಸುತ್ತಿರುವುದನ್ನು ಮೊಬೈಲ್ ಮೂಲಕ ದೃಶ್ಯ ಸೆರೆ ಮಾಡುತ್ತಲೇ, ತಮ್ಮ ಖಾತೆಯಲ್ಲಿ ಹರಿಬಿಟ್ಟ ಸ್ಥಳೀಯ ಮಹೇಶ್ ರೆಡ್ಡಿ ಎಂಬುವರು 'ಕನ್ನಡ ಮಾತನಾಡಲೇ ಬೇಕು. ಅದು ಆರ್ಬಿಐ ನಿಯಮ' ಎಂದು ಪಟ್ಟು ಹಿಡಿದಿದ್ದರು.
ಈ ವೇಳೆ ಮ್ಯಾನೇಜರ್ ಸವಾಲು ಹಾಕುತ್ತಲೇ 'ಆರ್ಬಿಐ ನಲ್ಲಿ ಗೈಡ್ಲೈನ್ಸ್ ಎಲ್ಲಿದೆ. ಕನ್ನಡ ಮಾತನಾಡಬೇಕು ಎಂಬ ಮ್ಯಾಂಡೇಟರಿ ಏನಿಲ್ಲ. ನಾನು ಕನ್ನಡ ಮಾತನಾಡುವುದಿಲ್ಲ ' ಎಂದು ಅವರೂ ಕೂಡಾ ವಿಡಿಯೋ ಮಾಡಿಕೊಂಡಿದ್ದರು.
ವಿಡಿಯೋ ವೈರಲಾಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆನೇಕಲ್ ಸುತ್ತಲಿನ ಎಲ್ಲ ಖಾಸಗಿ ಬ್ಯಾಂಕ್ಗಳಲ್ಲಿ ಪರಭಾಷಿಗರೇ ಕಾಣುತ್ತಿದ್ದು, ಸ್ಥಳೀಯರಿಗೆ ಬ್ಯಾಂಕ್ ಸೇವೆಗಳ ಸಮಗ್ರ ಮಾಹಿತಿ ದೊರೆಯದೇ ಪರದಾಡುವಂತಾಗಿದೆ. ಇದರಿಂದಾಗಿ ಆಗಾಗ ಇಂತಹ ಘಟನೆಗಳು ಮರುಕಳಿಸುತಿವೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?






